ಚಿತ್ರ : ನೈಟ್ ಕರ್ಫ್ಯೂ
ನಿರ್ದೇಶಕ : ರವೀಂದ್ರ ವೆಂಶಿ
ನಿರ್ಮಾಪಕ : ಬಿ.ಎಸ್. ಚಂದ್ರಶೇಖರ್
ಸಂಗೀತ : ಎಂ ಎಸ್ ಮಾರುತಿ
ಛಾಯಾಗ್ರಾಹಕ : ಪ್ರಮೋದ್ ಭಾರತೀಯ
ತಾರಾಗಣ : ಮಾಲಾಶ್ರೀ, ರಂಜನಿ ರಾಘವನ್, ಪ್ರಮೋದ್ ಶೆಟ್ಟಿ , ರಂಗಾಯಣ ರಘು, ಸಾಧುಕೋಕಿಲ, ವರ್ಧನ್, ಬಲ ರಾಜವಾಡಿ , ಅಶ್ವಿನ್ ಹಾಸನ್ ಇತರರು....
ನಾಲ್ಕು ವರ್ಷಗಳ ಹಿಂದೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಮಹಾಮಾರಿ ಕೊರೊನಾ ಮನುಕುಲವನ್ನೇ ನಾಶ ಮಾಡ ಹೊರಟಿತ್ತು.
ಆ ಸಂದರ್ಭದಲ್ಲಿ ಮತ್ತು ಆನಂತರದ ದಿನಗಳಲ್ಲಿ ಊಹೆಗೂ ನಿಲುಕದ ಅನೇಕ ಘಟನಾವಳಿಗಳು ನಡೆದು ಹೋದವು..
ಅಂಥಾ ಸಮಯದಲ್ಲೂ ಕೆಲವರು ಹಣ ಮಾಡುವ ದಂದೆಗಿಳಿದರು, ಆಸ್ಪತ್ರೆಗಳು ಸುಲಿಗೆ ಕೇಂದ್ರಗಳಾಗಿದ್ದವು ಮತ್ತು ಮಾಫಿಯಾ ಸ್ಥಳಗಳಾಗಿದ್ದವು. ಆ ಟೈಮ್ ನಲ್ಲಿ ಅದೆಷ್ಟೋ ಕೊಲೆ, ಸುಲಿಗೆಯಂಥಾ ಘಟನೆಗಳು ನಡೆದು ಮುಚ್ಚಿಹೋಗಿವೆ.
ಅಂಥಾ ಸಮಯದಲ್ಲಿ ನಡೆದ ಒಂದು ಕೊಲೆ ಪ್ರಕರಣವನ್ನಿಟ್ಟುಕೊಂಡು ನಿರ್ದೇಶಕ ರವೀಂದ್ರ ವೆಂಶಿ ಅವರು ನೈಟ್ ಕರ್ಫ್ಯೂ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.
ದುಷ್ಕರ್ಮಿಗಳ ಗುಂಪು ಕೊಲೆಯೊಂದನ್ನು ಕೋವಿಡ್ ನೆಪದಲ್ಲಿ ಮುಚ್ಚಿ ಹಾಕಲು ಪ್ಲಾನ್ ಮಾಡುತ್ತದೆ. ಮಿಲಿಟರಿಯಲ್ಲಿ ಕೆಲಸ ಮಾಡಿಬಂದಿದ್ದ ದಿಟ್ಟ ವೈದ್ಯೆ ಡಾ.ದುರ್ಗಾ ಹಾಸ್ಪಿಟಲ್ ನಲ್ಲಿ ಕೋವಿಡ್ ರೋಗಿಗಳನ್ನು ಕಾಪಾಡಲು ಹಗಲಿರಲು ಶ್ರಮಿಸುತ್ತಿರುತ್ತಾಳೆ, ಆಕೆಗೆ ಡಾ. ವೇದ (ರಂಜಿನಿ ರಾಘವನ್) ಕೂಡ ಸಾತ್ ನೀಡುತ್ತಾರೆ. ಅದೇ ಆಸ್ಪತ್ರೆಗೆ ಬಂದು ಕೊಲೆ ಪ್ರರಣವನ್ನು ಕೋವಿಡ್ ಕೇಸೆಂದು ಮುಚ್ಚಿಹಾಕಲು ಹೊರಟ ದುರುಳರ ಸಂಚನ್ನು ಡಾ.ದುರ್ಗಾ ಬಯಲಿಗೆಳೆಯುತ್ತಾಳೆ. ಈ ಹೋರಾಟದಲ್ಲಿ ಸಹಾಯಕ ವೈದ್ಯೆ ಡಾ.ವೇದ ಕೂಡ ಸಿಕ್ಕಿ ಹಾಕಿಕೊಂಡು ವೇದನೆ ಅನುಭವಿಸುತ್ತಾಳೆ. ಆಸ್ಪತ್ರೆಯ ಸಿಬ್ಬಂದಿಗಳ ಮೇಲೂ ಮಾರಣಾಂತಿಕ ಹಲ್ಲೆಯಾಗುತ್ತದೆ.. ಆ ಸತ್ತ ಯುವತಿ ಯಾರು, ಆಕೆಯ ಕೊಲೆಗೆ ಕಾರಣವೇನು, ಕೊಂದವರು ಯಾರು..ಹಾಸ್ಪಿಟಲ್ ಗೆ ಬರಲು ಕಾರಣ..ಇದೆಲ್ಲವನ್ನೂ ನೈಟ್ ಕರ್ಫ್ಯೂ ನಲ್ಲಿ ತೆರೆದಿಡಲಾಗಿದೆ.
ನಿರ್ದೇಶಕ ರವೀಂದ್ರ ವೆಂಶಿ ಅವರು ಕೋವಿಡ್ ಸಂದರ್ಭದಲ್ಲಿ ನಡೆದ ಸತ್ಯ ಘಟನೆಗಳನ್ನು ತೆಗೆದುಕೊಂಡು ದೃಶ್ಯ ರೂಪಕ್ಕಿಳಿಸುವ ಪ್ರಯತ್ನ ಮಾಡಿದ್ದಾರೆ.
ಡಾ.ದುರ್ಗೆ ಪಾತ್ರಧಾರಿ ಮಾಲಾಶ್ರೀ ತಾನು ಆಕ್ಷನ್ ಕ್ವೀನ್ ಅನ್ನೋದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರ ಜೊತೆಗೆ ಡಾಕ್ಟರ್ ವೇದಾ ಪಾತ್ರವನ್ನು ರಂಜಿನಿ ರಾಘವನ್ ಚೆನ್ನಾಗಿ ನಿಭಾಯಿಸಿದ್ದಾರೆ.
ಉಳಿದಂತೆ ಸಾಧು ಕೋಕಿಲ, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಬ.ಲ. ರಜವಾಡಿ, ಅಶ್ವಿನ್ ಹಾಸನ್, ಮಂಜು ಪಾವಗಡ, ವರ್ಧನ್ ಇವರೆಲ್ಲ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ, ಎಂ.ಎಸ್.ಮಾರುತಿ ಅವರ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿ ಮೂಡಿಬಂದಿದೆ.